ವಿಷಯಕ್ಕೆ ಹೋಗಿ

ಮಹಾತ್ಮಾ ಗಾಂಧಿ ಅವರ 67ನೇ ಪುಣ್ಯ ತಿಥಿ

ಮಹಾತ್ಮಾ ಗಾಂಧಿ ಅವರ 67ನೇ ಪುಣ್ಯ ತಿಥಿ:~
 
          ★ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸಿಕೊಟ್ಟು ಇಡೀ ಜಗತ್ತಿಗೆ ಮಾದರಿಯಾದ ಮಹಾನ್‌ ಚೇತನ ಮೋಹನದಾಸ ಕರಮಚಂದ ಗಾಂಧಿ. ಸಂಘಟನೆ, ಹೋರಾಟ, ನಿರಶನ, ಸ್ವದೇಶಿ ಪ್ರವೃತ್ತಿ ಮೈಗೂಡಿಸಿಕೊಂಡಿದ್ದ ಗಾಂಧೀಜಿ ಚಳವಳಿ ನಡೆಸುತ್ತಾರೆ ಎಂದರೆ ಸಾಕು ಬ್ರಿಟಿಷರಿಗೆ ತಲೆ ಬಿಸಿಯಾಗುತ್ತಿತ್ತು. ಏಕೆಂದರೆ ಗಾಂಧಿ ಅವರ ಒಂದು ಕರೆಗೆ ಓಗೊಟ್ಟು ದೇಶದ ಸಮಸ್ತ ನಾಗರಿಕರು ಅವರೊಟ್ಟಿಗೆ ಹಜ್ಜೆಹಾಕುತ್ತಿದ್ದರು. ಹೌದು, 'ಗಾಂಧಿ' ಎಂಬ ಪದದಲ್ಲಿ ಆ ತಾಕತ್ತು ಇತ್ತು.
         ★ ಯಾವುದೇ ಶಸ್ತ್ರಾಸ್ತ್ರವಿಲ್ಲದೆ, ಪ್ರಚೋದನಕಾರಿ ಭಾಷಣ ಮಾಡದೆ, ಯುದ್ಧ, ಕ್ರಾಂತಿಕಾರಿ ಹೆಜ್ಜೆಯನ್ನಿಡದೆ ಕೇವಲ ಚಳವಳಿ, ನಿರಶನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್‌ ನಾಯಕ ಗಾಂಧೀಜಿ. ಆದರೆ ಇಷ್ಟೆಲ್ಲಾ ಹೋರಾಟ ಮಾಡಿದರೂ ಸ್ವತಂತ್ರ ಭಾರತದಲ್ಲಿ 6 ತಿಂಗಳ ಕಾಲ ಅವರು ಜೀವಂತವಾಗಿ ಉಳಿಯಲು ಸಾಧ್ಯವಾಗಲಿಲ್ಲ. ಜನವರಿ 30 ಗಾಂಧೀಜಿ ಅವರ ಪುಣ್ಯತಿಥಿ. ಈ ದಿನ ಬಂತೆಂದರೆ ಸಾಕು ಗಾಂಧೀಜಿ ಜೊತೆಗೆ ನಾಥೂರಾಮ್‌ ವಿನಾಯಕ ಗೋಡ್ಸೆ ಎಂಬ ವ್ಯಕ್ತಿಯ ಹೆಸರನ್ನು ಕೂಡ ಈ ದೇಶ ನೆನಪಿಸಿಕೊಳ್ಳುತ್ತದೆ.
     ★ ಗೋಡ್ಸೆಗೇಕೆ ಗಾಂಧಿ ಮೇಲೆ ಸಿಟ್ಟು?:-
ತನ್ನ ಆಡಳಿತವನ್ನೇ ಕಿತ್ತುಕೊಳ್ಳಲು ಯತ್ನಿಸುತ್ತಿದ್ದ ಗಾಂಧೀಜಿ ಹತ್ಯೆ ಮಾಡುವ ಕನಸನ್ನು ಬ್ರಿಟಿಷರು ಕೂಡ ಕಂಡಿರಲಿಲ್ಲ. ಹೀಗಿರುವಾಗ ಭಾರತೀಯನೇ ಆದ, ಅದರಲ್ಲೂ ವಿದ್ಯಾವಂತ, ಉತ್ತಮ ಚಾರಿತ್ರ್ಯವುಳ್ಳ, ಮೇಲಾಗಿ ಒಂದು ಪತ್ರಿಕೆ ನಡೆಸುತ್ತಿದ್ದ ವಿಚಾರವಾದಿ ಗೋಡ್ಸೆ, ಗಾಂಧೀಜಿಯನ್ನು ನೇರವಾಗಿ ಗುಂಡಿಟ್ಟು ಹತ್ಯೆಗೈಯುತ್ತಾನೆಂದರೆ? ಅಷ್ಟಕ್ಕೂ ಗಾಂಧೀಜಿ ಮೇಲೆ ಈ ಗೋಡ್ಸೆಗೇಕೆ ಅಷ್ಟೊಂದು ಸಿಟ್ಟಿತ್ತು? ಹೀಗೆ ತರಹೇವಾರಿ ಪ್ರಶ್ನೆಗಳು ಇಂದಿಗೂ ಕೋಟ್ಯಂತರ ಭಾರತೀಯರನ್ನು ಕಾಡುತ್ತಿವೆ.
ಅಹಿಂಸಾ ಮಾರ್ಗ ಅನುಸರಿಸಿದ ಗಾಂಧೀಜಿ ರಕ್ತದ ಮಡುವಿನಲ್ಲಿ ಮಲಗಿ ಪ್ರಾಣ ಬಿಡುತ್ತಾರೆಂದು ಯಾರೊಬ್ಬರೂ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಗಾಂಧಿ ಅವರು ಎಷ್ಟು ಪ್ರಾಮಾಣಿಕ, ಅಹಿಂಸಾವಾದಿಯೋ ಅಷ್ಟೇ ಹಠವಾದಿ. ತನ್ನ ಮಾತು ಪಾಲನೆಯಾಗದ ಹೊರತು ಅವರು ಹಿಡಿದ ಹಠವನ್ನು ಮಾತ್ರ ಬಿಡುತ್ತಿರಲಿಲ್ಲ. ಬಹುಶಃ ಈ ಹಠವೇ ಅವರ ಹತ್ಯೆಗೆ ಕಾರಣವಾಯಿತೆ ಎಂಬ ಪ್ರಶ್ನೆ ಕೆಲವೊಮ್ಮೆ ಇತಿಹಾಸವನ್ನು ಮೆಲುಕುಹಾಕಿದಾಗ ಗೋಚರವಾಗುತ್ತದೆ.
          ★ 1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸುತ್ತಿದ್ದಂತೆ ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ವಿಶ್ವದ ಭೂಪಟದಲ್ಲಿ ಉದಯಿಸಿತು. ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಕಂಡ ಭಾರತ ಸ್ವಾತಂತ್ರಾéನಂತರ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುವುದನ್ನು ದೈನ್ಯವಾಗಿ ನೋಡಿತು. ಕೋಟ್ಯಂತರ ಮಂದಿ ನಿರ್ಗತಿಕರಾಗಬೇಕಾಯಿತು.
       ★ 55 ಕೋಟಿ ರೂ.ಗೆ 'ಬಲಿ' :-
      ಈ ಸಂದರ್ಭದಲ್ಲಿ ಭಾರತ ತನ್ನ ಪಾಲಿನ 55 ಕೋಟಿ ರೂ. ಹಣವನ್ನು ಈಗಲೇ ಪಾವತಿಸಬೇಕು ಎಂದು ಪಾಕಿಸ್ತಾನ ಒತ್ತಡ ಹೇರಲಾರಂಭಿಸಿತು. ಆಗ ಭಾರತದ ಉಪಪ್ರಧಾನಿಯಾಗಿದ್ದ ಸರ್ದಾರ್‌ ವಲ್ಲಭಬಾಯಿ ಪಟೇಲರು ಮಾತ್ರ ಪಾಕಿಸ್ತಾನಕ್ಕೆ ಭಾರತ 55 ಕೋಟಿ ರೂ. ನೀಡಬೇಕೆಂದಿಲ್ಲ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಪಾಕಿಸ್ತಾನಕ್ಕೆ ಹಣ ಪಾವತಿಸುವ ವಿಷಯದಲ್ಲಿ ಭಾರತ ಮುಂದೆ ಬರುವುದಿಲ್ಲ ಎಂದು 1948ರ ಜನವರಿ 12ರಂದು ಪತ್ರಿಕಾಗೋಷ್ಠಿಯಲ್ಲಿ ಘಂಟಾಘೋಷವಾಗಿ ಹೇಳಿದರು.
ಈ ಸುದ್ದಿ ತಿಳಿದ ಗಾಂಧೀಜಿ ಮಾತ್ರ ತೀವ್ರ ನಿರಾಶೆಗೆ ಒಳಗಾಗಿದ್ದರು. ಪಾಕಿಸ್ತಾನಕ್ಕೆ ಸಲ್ಲಬೇಕಿರುವ ಹಣವನ್ನು ಭಾರತ ಪಾವತಿಸಬೇಕು. ಇಲ್ಲದಿದ್ದರೆ ನಾನು ಉಪವಾಸ ಕೂರದೆ ಬೇರೆ ಮಾರ್ಗವಿಲ್ಲ ಎಂದು ಭಾರತ ಸರ್ಕಾರದ ಮೇಲೆ ಗಾಂಧೀಜಿ ಒತ್ತಡ ಹೇರಲಾರಂಭಿಸಿದ್ದು ಮಾತ್ರವಲ್ಲದೆ 1948ರ ಜನವರಿ 13ರಿಂದ ನಿರಶನ ಕೈಗೊಂಡೇಬಿಟ್ಟರು. ಆದರೆ ಇದೇ ತನ್ನ ಕೊನೆಯ ನಿರಶನವಾಗಲಿದ್ದು, ತನ್ನ ಮೃತ್ಯುವಿಗೆ ನಾಂದಿಯಾಗಬಲ್ಲದು ಎಂದು ಬಹುಶಃ ಅವರೂ ಊಹಿಸಿರಲಿಲ್ಲ.
ಗಾಂಧೀಜಿ ನಿರಶನ ಹಮ್ಮಿಕೊಳ್ಳುತ್ತಿದ್ದಂತೆ ಭಾರತ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಯಿತು. ಇದರ ಪರಿಣಾಮವಾಗಿ ಪಾಕಿಸ್ತಾನಕ್ಕೆ ಸಲ್ಲಬೇಕಿರುವ ಹಣವನ್ನು ಪಾವತಿಸಲು ಭಾರತ ಸಿದ್ಧವಿದೆ ಎಂದು ಸರ್ಕಾರ ಘೋಷಿಸಿಬಿಟ್ಟಿತು. ಪಾಕಿಸ್ತಾನಕ್ಕೆ ಹಣ ಪಾವತಿಸುವುದಕ್ಕೆ ಭಾರತ ಒಪ್ಪಿಕೊಂಡಿದ್ದು ಗಾಂಧೀಜಿಯ ಬ್ಲ್ಯಾಕ್‌ವೆುàಲ್‌ ತಂತ್ರದಿಂದ ಎಂದು ನಾಥೂರಾಮ್‌ ಗೋಡ್ಸೆ ಸಿಟ್ಟಾದರು. ಆಗ ಮನದಲ್ಲೇ ಒಂದು ನಿರ್ಧಾರಕ್ಕೆ ಬಂದರು. ಅದುವೇ ಗಾಂಧೀಜಿ ಹತ್ಯೆ. ವೈಯಕ್ತಿಕವಾಗಿ ತನಗೆ ಗಾಂಧೀಜಿ ಮೇಲೆ ದ್ವೇಷವಿಲ್ಲದಿದ್ದರೂ ಸರ್ಕಾರದ ವಿಷಯದಲ್ಲಿ ಮೂಗುತೂರಿಸುತ್ತಿರುವ ಮತ್ತು ಪಾಕಿಸ್ತಾನದ ಪರವಾಗಿ ವಾದಿಸುತ್ತಿರುವ ಗಾಂಧೀಜಿ ಈ ದೇಶದ ಭವಿಷ್ಯಕ್ಕೆ ಕಂಟಕ ಎಂದು ಅವರು ಭಾವಿಸಿರಬೇಕು. ಅಂತಹದ್ದೊಂದು ಅನಾಹುತಕಾರಿ ಯೋಚನೆ ಈ ದೇಶದ ರಾಷ್ಟ್ರಪಿತನ ಸಾವಿಗೆ ಮುನ್ನುಡಿ ಬರೆಯಿತು.
      ★ ನಮಸ್ಕಾರ ಮಾಡಿ ಗುಂಡಿಕ್ಕಿದ
ಅಂದು 1948 ಜನವರಿ 30. ಸಂಜೆ ಐದು ಗಂಟೆ ಸುಮಾರಿಗೆ ದೆಹಲಿಯ ಬಿರ್ಲಾ ಭವನದಲ್ಲಿ ಪ್ರಾರ್ಥನೆಗೆಂದು ಗಾಂಧೀಜಿ ತಮ್ಮ ಅನುಯಾಯಿಗಳ ಜೊತೆ ಬರುತ್ತಿದ್ದರು. ಈ ಸಮಯದಲ್ಲಿ ಗೋಡ್ಸೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬಿರ್ಲಾ ಭವನ ಪ್ರವೇಶಿಸಿ ಜನರ ಮಧ್ಯೆ ಜಾಗ ಮಾಡಿಕೊಂಡು ನಿಂತಿದ್ದ.
ಗಾಂಧೀಜಿ ಆಗಮನವಾಗುತ್ತಿದ್ದಂತೆ ಅವರ ಬಳಿಗೆ ಬಂದ ಗೋಡ್ಸೆ, ಅವರ ಕಾಲಿಗೆರಗಿ ನಮಸ್ಕರಿಸಿದ. ನಂತರ ಕ್ಷಣಾರ್ಧದಲ್ಲಿ ಗಾಂಧಿ ಬದಿಯದ್ದ ಮಹಿಳೆಯನ್ನು ಪಕ್ಕಕ್ಕೆ ಎಳೆದು ಗಾಂಧೀಜಿ ಎದೆಗೆ 3 ಸುತ್ತು ಗುಂಡು ಹಾರಿಸಿದ. ಗುಂಡಿನ ಮೊರೆತ ಕೇಳುತ್ತಿದ್ದಂತೆ ಭಯಭೀತರಾದ ಜನ ದೂರ ಓಡತೊಡಗಿದರೆ ಏಕಾಂಗಿಯಾದ ಗಾಂಧೀಜಿ 'ಹಾ' ಎಂದು (ಗಾಂಧಿ ಸಾಯುವಾಗ 'ಹೇ ರಾಮ್‌' ಎಂದಿದ್ದರು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಅದು ನಿಜವಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ) ಉದ್ಗರಿಸಿ ನೆಲಕ್ಕುರುಳಿದರು. ಇಷ್ಟಾದರೂ ಗೋಡ್ಸೆ ಮಾತ್ರ ನಿಂತ ಜಾಗದಿಂದ ಕದಲದೆ ಅಲ್ಲೇ ನಿಂತಿದ್ದ. ವಿಶೇಷ ಅಂದರೆ ಪಿಸ್ತೂಲ್‌ ಹಿಡಿದ ಕೈಯನ್ನು ಮೇಲಕ್ಕೆತ್ತಿ ತನ್ನನ್ನು ಬಂಧಿಸಿ ಎಂದು ಗೋಡ್ಸೆ ಕೂಗಿದರೂ ಕ್ಷಣಕಾಲ ಯಾವೊಬ್ಬ ಪೊಲೀಸರು ಕೂಡ ಆತನನ್ನು ಬಂಧಿಸುವ ಧೈರ್ಯ ತೋರಲಿಲ್ಲ. ಬಳಿಕ ತನ್ನ ಕೈಲಿದ್ದ ಪಿಸ್ತೂಲನ್ನು ದೂರ ಬಿಸಾಡಿದ ಬಳಿಕ ಗೋಡ್ಸೆಯ ಬಂಧನವಾಯಿತು. ನಂತರ ವಿಚಾರಣೆ, ಕೊನೆಗೆ 1949 ನವೆಂಬರ್‌ 15ರಂದು ಗೋಡ್ಸೆ ಜೊತೆಗೆ ನಾರಾಯಣ ಆಪ್ಟೆಯನ್ನು ಕೂಡ ಗಲ್ಲಿಗೇರಿಸಲಾಯಿತು.
       ★ ಅಹಿಂಸಾ ತತ್ವ ಪಾಲಿಸಿಕೊಂಡು ಬಂದಿದ್ದ ಗಾಂಧೀಜಿ ಹೀಗೆ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟಿದ್ದು ನಿಜಕ್ಕೂ ದುರ್ದೈವವೇ ಸರಿ. ಇಡೀ ದೇಶವೇ ಗೋಡ್ಸೆ ಕೃತ್ಯವನ್ನು ಟೀಕಿಸಲಾರಂಭಿಸಿತು. ಆದರೆ ಆತ ಮಾತ್ರ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. 'ಭವಿಷ್ಯದಲ್ಲಿ ಒಂದು ದಿನ ಪ್ರಾಮಾಣಿಕರಾದ ಇತಿಹಾಸ ಲೇಖಕರು ನನ್ನ ಕೃತ್ಯವನ್ನು ಒರೆಗೆ ಹಚ್ಚಿ ಅದರ ನಿಜವಾದ ಬೆಲೆಯನ್ನು ಕಂಡು ಹಿಡಿಯುತ್ತಾರೆ' ಎಂದು ಆತ ಹೇಳಿಕೊಂಡಿದ್ದಾನೆ. ಗಾಂಧಿ ಹತ್ಯೆಗೆ ಪ್ರಮುಖ ಕಾರಣ, ಘಟನೆಯಲ್ಲಿ ಸರ್ಕಾರ ವರ್ತಿಸಿಕೊಂಡ ರೀತಿ, ಇತರೆ ಆರೋಪಿಗಳ ವಿವರ, ಗಾಂಧಿ ಹತ್ಯೆಗೂ ಮುನ್ನ ನಡೆದ ಕೆಲವು ಘಟನೆಗಳು ಸೇರಿದಂತೆ ಹಲವಾರು ಸಂಗತಿಗಳನ್ನು ಗೋಡ್ಸೆಯ ತಮ್ಮ ಗೋಪಾಲ ಗೋಡ್ಸೆ (ನಾನೇಕೆ ಗಾಂಧಿ ಹತ್ಯೆ ಮಾಡಿದೆ) ಪುಸ್ತಕದಲ್ಲಿ ಸವಿವರವಾಗಿ ಪ್ರಕಟಿಸಿದ್ದಾರೆ. ವಾಸ್ತವವಾಗಿ ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಲ್ಲ, ಆ ಸಂದರ್ಭ. ಅವನು ಬಂದೂಕು ಕೈಗೆತ್ತಿಕೊಳ್ಳುವಂತೆ ಮಾಡಿದ್ದು ಸ್ವತಂತ್ರ ಭಾರತದ ಆಡಳಿತಗಾರರ ವಿಪರೀತ ನಡೆಗಳು. ಅಂದು ಈ ದೇಶ ಗಾಂಧಿಯನ್ನು ಕೊಂದಿತು, ಇಂದು ಅವರ ತತ್ವಗಳನ್ನು ಕೊಲ್ಲುತ್ತಿದ್ದೇವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...